
ಸ್ಯಾಂಡಲ್ವುಡ್ ನಲ್ಲಿ ನೆಪೋಟಿಸಂ ಹಾಗು ಜಾತಿ ಭೇದ ಇದೆ ಎಂಬ ಆರೋಪದ ಬಗ್ಗೆ ಕವಿರಾಜ್ ಏನೆನ್ನುತ್ತಾರೆ..ಮುಂದೆ ಓದಿ
(Visited 140 times, 1 visits today)
ಇತ್ತೀಚಿಗೆ ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಾಜಪುತ್ ರವರ ಆತ್ಮಹತ್ಯೆಗೆ ನೆಪೋಟಿಸಂ ಕಾರಣ ಎಂಬ ಚರ್ಚೆ ನಡೆಯುತ್ತಿದೆ. ತದನಂತರ ಸ್ಯಾಂಡಲ್ವುಡ್ ನಲ್ಲೂ ನೆಪೋಟಿಸಂ ಇದೆ ಎಂಬ ಕೆಲವೊಬ್ಬರ ಆರೋಪವನ್ನು ದಿಕ್ಕರಿಸಿ ಸ್ವತಃ ಕವಿರಾಜ್ ರವರು ಈ ಲೇಖನ ಬರೆದಿದ್ದರೆ.
ನನ್ನ ಎರಡು ದಶಕದ ಅನುಭವದಲ್ಲಿ ಇನ್ನೂ ತುಂಬಾ ಲಿಬರಲ್ ಆಗಿರೋದು ಸಿನಿಮಾ ರಂಗವೇ. ನಮ್ಮ ಜೊತೆಗೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರೊ ಬಹುತೇಕ ಜನರ ಜಾತಿ ನಮಗಿನ್ನೂ ತಿಳಿದಿಲ್ಲ.
ಹಾಗೇ ಈವರೆಗೆ ಸಿನಿಮಾದವರ್ಯಾರು ಪರೋಕ್ಷವಾಗಿ ಕೂಡಾ ನನ್ನ ಜಾತಿ ಕೇಳಿಲ್ಲ. ಕೇಳಿರುವುದೆಲ್ಲ ಹೊರಗಿನವರೇ.
ರೆಗ್ಯುಲರ್ ಸಿನಿಮಾ ಮೇಕರ್ಸ್ ಯಾರು ಕೇವಲ ಜಾತಿ ಆಧಾರಿತ ಗುಂಪು ಕಟ್ಟಿಕೊಂಡು ಸಿನಿಮಾ ಮಾಡುತ್ತಿಲ್ಲ. ಕೆಲವು ನಿರ್ದೇಶಕರು ಬೆನ್ನಿನ ಮೇಲೆ ಕೈಯಾಡಿಸಿ ಏನೋ ಪರೀಕ್ಷಿಸುತ್ತಾರೆ ಎಂಬ ಮಾತನ್ನು ಕೇಳಿದ್ದೆನಾದರೂ ಸ್ವತಃ ಅಂತಹಾ ನಿರ್ದೇಶಕರ ಜೊತೆಯಲ್ಲಿ ಕೆಲಸ ಮಾಡಿದ್ದಾಗಲೂ ಆ ರೀತಿಯ ಯಾವ ನಡವಳಿಕೆಯು ನನ್ನ ಗಮನಕ್ಕೆ ಬರಲಿಲ್ಲ. ಪ್ರಶಸ್ತಿ ,ಆದ್ಯತೆ ಮತ್ತು ಪರಿಗಣನೆ ವಿಷಯದಲ್ಲಿ ಕೆಲವು ಪಕ್ಷಪಾತಗಳು ನನಗೆ ಕೆಲವೊಮ್ಮೆ ಕಾಣಿಸಿದ್ದರು ಕೂಡಾ ಅದು ಸಿನಿಮಾಕ್ಕೆ ನೇರವಾಗಿ ಸಂಬಂಧಿತ ಅಲ್ಲದ ಬೇರೆ ಮೀಡಿಯಾಗಳಿಂದಲೇ ಆಗಿದ್ದು . ನೆಪೋಟಿಸಂ( ಸ್ವಜನಪಕ್ಷಪಾತ) ಅನ್ನುವುದು ನನಗಿಲ್ಲಿ ಕಾಣಿಸಿಲ್ಲ.
ಸಿನಿಮಾ ಟೀಂ ವರ್ಕ್ ಆಗಿರುವುದರಿಂದ ತಮಗೆ ಕಂಫರ್ಟ್ ಆಗಿರುವವರ ಜೊತೆ ಕೆಲಸ ಮಾಡಲು ಬಯಸುವುದು ಅತ್ಯಂತ ಸಹಜ,ಸಮಂಜಸ ಗುಣವೇ ಹೊರತು ನೆಪೋಟಿಸಂ ಆಗಲಾರದು. ಇಲ್ಲಿ ರಾಜ್ಕುಮಾರ್ ಅವರ ಪುತ್ರರಾದರೂ ಶಿವಣ್ಣ , ಅಪ್ಪು ಖ್ಯಾತಿ ಗಳಿಸಿದ್ದು ತಮ್ಮ ಅಭಿನಯ ಸಾಮರ್ಥ್ಯ, ಡಾನ್ಸ್ ,ಫೈಟ್ ಜೊತೆ ತಮ್ಮ ಸರಳತೆ ,ಸಜ್ಜನಿಕೆಯಿಂದಲೇ.
ಹಿಂದಿ, ತೆಲುಗು ಅಂತಹಾ ದೊಡ್ಡ ಮಾರುಕಟ್ಟೆಯ ಸಿನಿಮಾ ಇಂಡಸ್ಟ್ರಿಯಲ್ಲು ಘಟಾನುಘಟಿಗಳ ಸರಿಸಮಕ್ಕೆ ಅಭಿನಯಿಸಿ ಕನ್ನಡ ಕೀರ್ತಿ ಹೆಚ್ಚಿಸಿದ ಕಿಚ್ಚ ಸುದೀಪ್ ಆಗರ್ಭ ಶ್ರೀಮಂತರಾದರು ಮೊದಲ ಅವಕಾಶಕ್ಕಾಗಿ ಸುರಿಸಿದ ಬೆವರು,ಸಹಿಸಿದ ನೋವು ದೊಡ್ಡದೇ.
ಇವತ್ತು ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡು , ಅತ್ಯಂತ ಹೆಚ್ಚು ಮಾಸ್ ಫಾಲೋವರ್ಸ್ ಹೊಂದಿರುವ ದರ್ಶನ್ ತೂಗುದೀಪ್ ಖ್ಯಾತ ಖಳನಾಯಕನ ಮಗನಾದರು ಕೆಲಸ ಶುರುಮಾಡಿದ್ದು ಲೈಟ್ ಬಾಯ್ ಆಗಿ.
ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೋಟಿ ಸಂಭಾವನೆ ಪಡೆದ ನಟ ಗಣೇಶ್ ನೇಪಾಳಿ ಮೂಲದ ಬಡತಂದೆಯ ಮಗ. ಇವತ್ತು ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದು ಒಬ್ಬ ಬಸ್ ಡ್ರೈವರ್ ಮಗ ಯಶ್. ರಕ್ಷಿತ್ ಶೆಟ್ಟಿ ಈ ಮಟ್ಟಕ್ಕೆ ಹೆಸರು ಮಾಡೋ ಮೊದಲು ಒಂದು ದಶಕದ ವನವಾಸ ಅನುಭವಿಸಿದ್ದಾರೆ. ಪ್ರತಿಭೆ,ಲುಕ್ ಇದ್ದರೂ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ರವಿಚಂದ್ರನ್ ಅಂತಹಾ ರವಿಚಂದ್ರನ್ ಅವರ ಮಕ್ಕಳೇ ಇನ್ನೂ ಮೊದಲ ಹೆಜ್ಜೆ ಊರಲು ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಐತಿಹಾಸಿಕ ಹಿಟ್ ಸಿನೆಮಾಗಳನ್ನು ಕೊಟ್ಟ ರಾಜೇಂದ್ರ ಸಿಂಗ್ ಬಾಬು, ಎಸ್ . ನಾರಾಯಣ್ ಅಂತಹಾ ನಿರ್ದೇಶಕರ ಮಕ್ಕಳು ಹೀರೋ ಆಗಿ ನೆಲೆಯೂರಲಾಗದೆ ನಿರಾಸೆಗೊಂಡಿದ್ದಾರೆ. ಅತ್ಯಂತ ಸ್ಫುರದ್ರೂಪಿಗಳು, ಪ್ರತಿಭಾವಂತರು ಆದ ಅಣ್ಣಾವ್ರು , ವಿಷ್ಣು ದಾದಾರ ಅಳಿಯಂದಿರಿಗೆ ಬೆಳ್ಳಿತೆರೆಯ ಯಶಸ್ಸು ಒಲಿಯಲೇ ಇಲ್ಲಾ.
ನೋಡುಮಗ.ಕಂ ವಿಡಿಯೋ ನ್ಯೂಸ್ ಗಳನ್ನು ನೋಡಲು ನಮ್ಮ YOUTUBE ಚಾನೆಲ್ SUBSCRIBE ಮಾಡಿ — >>
ಇವತ್ತಿನ ಯಾವ ದೊಡ್ಡ ನಿರ್ದೇಶಕರು ಸಿನಿಮಾ ಕುಟುಂಬದವರಲ್ಲಾ.. ಯಾವ ಸ್ಟಾರ್ ನಾಯಕಿಯೂ ಯಾವುದೇ ಸ್ಟಾರ್ ಕುಟುಂಬದವರಲ್ಲ. ಅಂತಹಾ ಪ್ರಯತ್ನ ನಡೆಸಿದ ಹಲವರಿಗೆ ಯಶಸ್ಸು ಸಿಕ್ಕಿಲ್ಲ. ತಮ್ಮ ಮಕ್ಕಳು ತಮ್ಮ ಕ್ಷೇತ್ರದಲ್ಲಿ ಹೆಸರು ಮಾಡಲಿ ಎಂದು ಆಶಿಸುವುದು , ಮೊದಲ ಅವಕಾಶ ಮಾಡಿಕೊಡುವುದು ಒಂದು ರೀತಿಯಲ್ಲಿ ತಂದೆ ತಾಯಿಗಳ ಜವಾಬ್ದಾರಿಯೂ ಹೌದು. ಹಾಗಾಗಿ ಕೆಲವರಿಗೆ ಮೊದಲ ಒಂದೆರಡು ಅವಕಾಶಗಳು ಸಿಕ್ಕಿರಬಹುದು. ಆದರೆ ಮುಂದುವರಿದು ಗಟ್ಟಿಯಾಗಿ ನೆಲೆ ನಿಲ್ಲಲು ಬೇಕಾದ ಯಶಸ್ಸು ಯಾರ ಕೈಲೂ ಇರುವುದಿಲ್ಲ . ಅದು ಶುದ್ಧ ಪ್ರತಿಭೆ, ಪರಿಶ್ರಮ, ಬಿದ್ದಷ್ಟು ಎದ್ದು ನಿಲ್ಲುವ ಛಲ ಹಾಗೂ ಬೆವರಿಗೆ ಮಾತ್ರ ಸಾಧ್ಯವಾಗುವಂತದ್ದು. ಜನ ಇಷ್ಟಪಟ್ಟರೆ ಮಾತ್ರ ಯಾರು ಏನು ಬೇಕಾದರೂ ಆಗಬಹುದು. ಹಾಗಂತ ಈ ಕ್ರೆಡಿಟನ್ನು ಸಂಪೂರ್ಣ ಜನರಿಗೆ ಕೊಡುವುದು ಕೂಡಾ ಸಮಂಜಸ ಅಲ್ಲ.
ಜನ ಸುಮ್ಮನೆ ಯಾರನ್ನು ಇಷ್ಟಪಡುವುದಿಲ್ಲ . ಅವರು ಒಪ್ಪುವುದು ಕೂಡಾ ಪ್ರತಿಭೆ, ಪರಿಶ್ರಮ ಇದ್ದರೆ ಮಾತ್ರ. ಹಾಗಾಗಿ ಇಲ್ಲಿ ಜಾತಿ,ನೆಪೋಟಿಸಂ ಕೆಲಸಕ್ಕೆ ಬರುವುದಿಲ್ಲ. ಕೌಂಟ್ ಆಗುವುದು ಪ್ರತಿಭೆ , ಪರಿಶ್ರಮ ಮಾತ್ರವೇ…